+91 96066 68597 vidyadansamiti1920@gmail.com
ವಿದ್ಯಾದಾನ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ
ವಿದ್ಯಾದಾನ ಸಮಿತಿ ಶತಮಾನೋತ್ಸವ ಚಟುವಟಿಕೆಗಳು ದಿನಾಂಕ:25 ರಿಂದ ಪ್ರಾರಂಭ¨
ಗದಗ 20: ವಿದ್ಯೆಯ ದಾನಕ್ಕಾಗಿ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಾಗಿ, 100 ವರ್ಷಗಳ ಹಿಂದೆಯೇ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿಕೊಂಡ ಉತ್ತರ ಕರ್ನಾಟಕದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವಿದ್ಯಾದಾನ ಸಮಿತಿ ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದ್ದು ಜೂನ್- 25, 26 ರಿಂದ ಶತಮಾನೋತ್ಸವ ಚಟುವಟಿಕೆಗಳು ಪ್ರಾರಂಭಗೊಂಡು ನವ್ಹೆಂಬರ್- 12,13 ರ ವರೆಗೂ ನಡೆಯಲಿವೆ ಎಂದು ವಿದ್ಯಾದಾನ ಸಮಿತಿಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಶಾಸಕರಾದ ಡಿ.ಆರ್.ಪಾಟೀಲ ಹೇಳಿದರು.
ಅವರು ವಿದ್ಯಾದಾನ ಸಮಿತಿ ಶತಮಾನೋತ್ಸವ ನಿಮಿತ್ತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಒಂದು ಶತಮಾನಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತವಾದ ಸೇವೆ ಸಲ್ಲಿಸಿದ ವಿದ್ಯಾದಾನ ಸಮಿತಿಯು ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದೆ. ಶಿಕ್ಷಣದೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿದ್ಯಾದಾನ ಸಮಿತಿ ಕೊಡುಗೆ ಅಪಾರ. 1920ರಲ್ಲಿ ಓರ್ವ ಶಿಕ್ಷಕ ಮೂರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಈಗ ಎರಡು ಪ್ರಾಥಮಿಕ, ಎರಡು ಪ್ರೌಢಶಾಲೆ, ಎರಡು ಪದವಿಪೂರ್ವ ಕಾಲೇಜು, ಒಂದು ಬಿ.ಇಡಿ ಮತ್ತು ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಆಂಗ್ಲಮಾಧ್ಯಮ ಶಾಲೆ ಸೇರಿದಂತೆ 10 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಇದರಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಿದ್ದು, 2000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಂಸ್ಥೆ ಈಗ ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು.
ವಿದ್ಯಾದಾನ ಸಮಿತಿ ಹಳೆಯ ವಿದ್ಯಾರ್ಥಿಗಳು ಹಾಗೂ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಗುರುರಾಜ ಬಳಗಾನೂರ ಮಾತನಾಡಿ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಮೆಜಿಸ್ಟ್ರೇಟರಾಗಿದ್ದ ಎನ್.ವ್ಹಿ.ಹುಯಿಲಗೋಳ, ನಾಡಕವಿ ಹುಯಿಲಗೋಳ ನಾರಾಯಣರಾವ ಮತ್ತಿತರ ಗಣ್ಯಮಾನ್ಯರಿಂದ ಪ್ರಾರಂಭಗೊಂಡ ವಿದ್ಯಾದಾನ ಸಮಿತಿಯನ್ನು ಪ್ರಾ. ಎಚ್.ಎಸ್.ಹುಯಿಲಗೋಳ, ಭೀಮರಾವ್ ಹುಯಿಲಗೋಳ, ಮನೋರಮಾಬಾಯಿ ಹುಯಿಲಗೋಳ ವರಕವಿ ದ.ರಾ.ಬೇಂದ್ರೆ, ವಿಮರ್ಶಕ ಕೀರ್ತಿನಾಥ ಕುರ್ತಕೋಟಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಸ್.ಎನ್. ಅಯ್ಯಂಗಾರ್ ಮುಂತಾದವರು ವಿದ್ಯಾದಾನ ಸಮಿತಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಆಡಳಿತ ಮಂಡಳಿಯ ಸಹಕಾರದೊಂದಿಗೆ ಅಧ್ಯಕ್ಷರಾದ ಧೀರೇಂದ್ರ ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಸಮರ್ಥವಾಗಿ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ ಎಂದು ಹೇಳಿದರು.
ವಿದ್ಯಾದಾನ ಸಮಿತಿ ಹಳೆಯ ವಿದ್ಯಾರ್ಥಿಗಳಾದ ಖ್ಯಾತ ಲೆಕ್ಕ ಪರಿಶೋಧಕ, ಆದರ್ಶ ಶಿಕ್ಷಣ ಸಮಿತಿ ಚೇರಮನ್ರಾದ ಆನಂದ ಪೋತ್ನಿಸ್ ಮಾತನಾಡಿ ನವೆಂಬರ್-12 ಹಾಗೂ 13 ರಂದು ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಸುಧಾಮೂರ್ತಿ ಹಾಗೂ ಖ್ಯಾತ ಉದ್ಯಮಿ, ವಿದ್ಯಾದಾನ ಸಮಿತಿ ಹಳೆ ವಿದ್ಯಾರ್ಥಿಗಳಾದ ಡಾ.ವಿಜಯ ಸಂಕೇಶ್ವರ ಹಾಗೂ ಇನ್ನೂ ಅನೇಕ ಗಣ್ಯಮಾನ್ಯ ಅತಿಥಿಗಳು, ಅನೇಕ ಜನಪ್ರತಿನಿಧಿಗಳು ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ವಿದ್ಯಾದಾನ ಸಮಿತಿ ಹಳೆ ವಿದ್ಯಾರ್ಥಿಗಳಾದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ವಿಜಯ ಮೇಲಗಿರಿ ಮಾತನಾಡಿ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಶಾಸಕರಾದ ಎಚ್.ಕೆ.ಪಾಟೀಲ, ಪರಣ್ಣ ಮುನವಳ್ಳಿ, ಶಂಕರಣ್ಣ ಮುನವಳ್ಳಿ, ಅಮೆರಿಕಾ ಬಹುರಾಷ್ಟ್ರೀಯ ಕಂಪನಿಯ ಸಿ.ಇ.ಓ ರವಿ ಮೇಲಗಿರಿ, ಇನ್ನೂ ಅನೇಕ ಗಣ್ಯಮಾನ್ಯ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಜೂನ್-25 ರಿಂದ ಶತಮಾನೋತ್ಸವ ಚಟುವಟಿಕೆಗಳಿಗೆ ಚಾಲನ ನೀಡಲಾಗುತ್ತದೆ ಎಂದು ಹೇಳಿದರು.
ವಿದ್ಯಾದಾನ ಸಮಿತಿ ಹಳೆಯ ವಿದ್ಯಾರ್ಥಿಗಳಾದ ಗಣ್ಯ ಉದ್ಯಮಿ ಮೃತ್ಯುಂಜಯ ಸಂಕೇಶ್ವರ ಮಾತನಾಡಿ ಈಗಾಗಲೇ ಮಾಜಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಅವರು ವಿದ್ಯಾದಾನ ಸಮಿತಿ ಶತಮಾನೋತ್ಸವ ಕಚೇರಿಯನ್ನು ಉದ್ಘಾಟಿಸಿದ್ದು ಶತಮಾನೋತ್ಸವ ನಿಮಿತ್ತ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಕ್ರೀಡಾ ಸ್ಪರ್ಧೆಗಳನ್ನು , ಪ್ರಬಂಧ ಸ್ಪರ್ಧೆ, ಸಾಧನೆಗೈದ 100 ಜನಸಾಧಕರು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಮತ್ತು ಹಿರಿಯ ಬರಹಗಾರರಾದ ಜೆ.ಕೆ.ಜಮಾದಾರ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಂಗ್ರಹಯೋಗ್ಯ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ಎಂದು ಹೇಳಿದರು.
ಐ.ಎಂ.ಎ ಅಧ್ಯಕ್ಷರಾದ ಡಾ.ಪ್ಯಾರಾಲಿ ನೂರಾನಿ ಮಾತನಾಡಿ ವಿದ್ಯಾದಾನ ಸಮಿತಿಯು ಈ ಭಾಗದ ಅನೇಕ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ಮತ್ತು ಬೆಳವಣಿಗೆಗೆ ಸಹಾಯ ಸಹಕಾರ ಸಲ್ಲಿಸುತ್ತಾ ಬಂದಿದೆ. ಆದರ್ಶ ಶಿಕ್ಷಣ ಸಮಿತಿ, ಚಿಕ್ಕಟ್ಟೆ ಶಿಕ್ಷಣ ಸಂಸ್ಥೆ ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳು ವಿದ್ಯಾದಾನ ಸಮಿತಿಯ ಸಹಾಯ ಸಹಕಾರದೊಂದಿಗೆ ಬೆಳೆದು ಬಂದಿವೆ ಎಂದು ಹೇಳಿದರು.
ವಿದ್ಯಾದಾನ ಸಮಿತಿ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ಮಾತನಾಡಿ ವಿದ್ಯಾದಾನ ಸಮಿತಿಯು ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿದ್ದು, ಅವರೆಲ್ಲರೂ ವಿದ್ಯಾದಾನ ಸಮಿತಿ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂಬುದು ಆಡಳಿತ ಮಂಡಳಿಯವರ ಆಶಯವಾಗಿದೆ. ಅದಕ್ಕಾಗಿ ವಿಜಯ ಸಂಕೇಶ್ವರ ಅವರಿಂದ ವಿದ್ಯಾದಾನ ಸಮಿತಿಯ ವೆಬ್ ಸೈಟ್ www.vidyadansamiti.org ಉದ್ಘಾಟನೆಗೊಂಡಿದ್ದು ತಾವೆಲ್ಲರೂ ಅದನ್ನು ವೀಕ್ಷಿಸಿ Alumni/Event Registration ಲಿಂಕ್ ಉಪಯೋಗಿಸಿ ಹಳೆಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕೆಂದು ವಿನಂತಿಸಿದರು ಹಾಗೂ ಶತಮಾನೋತ್ಸವ ಕುರಿತಾದ ಮಾಹಿತಿಗಾಗಿ ಅಥವಾ ನೋಂದಣಿಗಾಗಿ ವಾಟ್ಸ್ಆಪ್ ಹಾಗೂ ಫೋನ್ ಕರೆಗಳ ಮೂಲಕ ಈ ನಂಬರುಗಳಿಗೆ 9606668597, 9448443808, 9480370343 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ವಿದ್ಯಾದಾನ ಸಮಿತಿಯು ನಾಟಕಗಳ ಪ್ರದರ್ಶನ ಮೂಲಕ ಪ್ರಾರಂಭವಾದ ಸಂಸ್ಥೆಯಾಗಿದ್ದು ಹೀಗಾಗಿ ಶತಮಾನೋತ್ಸವ ಸಹಾಯಾರ್ಥವಾಗಿ ಯಶವಂತ ಸರದೇಶಪಾಂಡೆಯವರ “ಆಲ್ ದಿ ಬೆಸ್ಟ್” ನಾಟಕ ಪ್ರದರ್ಶನವನ್ನು ದಿನಾಂಕ :25 ರಂದು ಹಾಗೂ “ರಾಶಿಚಕ್ರ” ನಾಟಕವನ್ನು ದಿನಾಂಕ: 26 ರಂದು ಸಾಯಂಕಾಲ 6.00 ಗಂಟೆಗೆ ಅಂಬೇಡ್ಕರ ಭವನದಲ್ಲಿ ಆಯೋಜಿಸಲಾಗಿದ್ದು ನಾಟಕ ವೀಕ್ಷಿಸಲು ವಿದ್ಯಾದಾನ ಸಮಿತಿ ಶತಮಾನೋತ್ಸವ ಕಛೇರಿ ಅಥವಾ ಈ ದೂರವಾಣಿ ಸಂಖ್ಯೆಗಳಿಗೆ 9901818464, 9743621910 ಸಂಪರ್ಕಿಸಬೇಕೆಂದು ಹಾಗೂ ವರ್ಷದಾದ್ಯಂತ ನಡೆಯುವ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಜಯಕುಮಾರ ಬಾಗಮಾರ, ಡಾ.ದತ್ತಪ್ರಸನ್ನ ಪಾಟೀಲ, ಪ್ರತೀಕ ಹುಯಿಲಗೋಳ ಪಾಲ್ಗೊಂಡಿದ್ದರು.